Lingayath Seers to Come Together for Swabhimani Sharana Mela
ಬಾಗಲಕೋಟೆ: ಬಸವ ಧರ್ಮ ಪೀಠದಿಂದ ಆಯೋಜಿಸುವ ಶರಣ ಮೇಳಕ್ಕೆ ಪರ್ಯಾಯವಾಗಿ ಕೂಡಲಸಂಗಮ ಬಳಿಯ ಹೂವನೂರಿನಲ್ಲಿ ಜ.13 ಮತ್ತು 14ರಂದು ಹಮ್ಮಿಕೊಂಡಿರುವ ಸ್ವಾಭಿಮಾನಿ ಶರಣ ಮೇಳವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ ಅವರು ಉದ್ಘಾಟಿಸಲಿದ್ದಾರೆ ಎಂದು ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣ ನೀಡದೆ ನನ್ನನ್ನು ಬಸವ ಧರ್ಮಪೀಠದಿಂದ ಉಚ್ಛಾಟಿಸಲಾಗಿದೆ. ಹಲವು ಬಾರಿ ಸಂಧಾನಕ್ಕೆ ಪ್ರಯತ್ನಗಳು ನಡೆದಾಗಲೂ ಮಾತೆ ಗಂಗಾದೇವಿ ಅವರು ಒಪ್ಪಲಿಲ್ಲ. ಹೀಗಾಗಿ ಪರ್ಯಾಯ ಮೇಳ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಜ.13ರಂದು ಬಸವಣ್ಣನವರ ಐಕ್ಯಮಂಟಪದಿಂದ ಜ್ಯೋತಿಯೊಂದಿಗೆ ಆಗಮಿಸುತ್ತೇವೆ. ದಿವ್ಯ ಸಾನಿಧ್ಯ ಎಂಬುದಕ್ಕೆ ವ್ಯಕ್ತಿ ಪ್ರತಿಷ್ಠಾಪನೆ ಮಾಡುವುದಿಲ್ಲ. ಬಸವಣ್ಣನವರ ವಚನಗಳನ್ನು ಆ ಸ್ಥಾನದಲ್ಲಿ ಕೂಡಿಸುತ್ತೇವೆ. ನೂರಾರು ಮಠಾಧೀಶರು ಅಂದು ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 50 ಸಾವಿರಕ್ಕೂ ಅಧಿಕ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಮ್ಮ ಹೋರಾಟ ಮುಂದವರಿಯಲಿದೆ. ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಲಿಂಗಾಯತ ಒಳಪಂಗಡಗಳಿಗೆ ದೊರೆಯಬೇಕೆಂದು ಹೇಳಿದರು.
ಸಿಂದಗಿಯ ಸದ್ಗುರು ಶ್ರೀಪ್ರಭುಲಿಂಗ ಸ್ವಾಮೀಜಿ, ಅಶೋಕ ಬೆಂಡಿಗೇರಿ, ಕಲ್ಮೇಶ ಲಿಂಗಾಯತ, ಕೆ.ಬಸವರಾಜಪ್ಪ ಮತ್ತಿತರರು ಇದ್ದರು.
![](https://nammabagalkot.com/wp-content/uploads/2023/01/WhatsApp-Image-2023-01-07-at-10.37.53-AM1-940x560.jpeg)