Tippu Nija Kanasugalu Drama Gets a Smooth Screening
ಬಾಗಲಕೋಟೆ: ಬಹುಚರ್ಚಿತ ಮೈಸೂರು ರಂಗಾಯಣದ ಟಿಪ್ಪು ನಿಜ ಕನಸುಗಳು ನಾಟಕವು ರವಿವಾರ ಸಂಜೆ ನವನಗರದ ಕಲಾಭವನದಲ್ಲಿ ಸುಸೂತ್ರವಾಗಿ ಪ್ರದರ್ಶನ ಕಂಡಿತು.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಭೀಮ್ ಆರ್ಮಿ ಸೇರಿ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಪೊಲೀಸರ ಬೆಂಗಾವಲಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಟಿಪ್ಪು ಪಾತ್ರಧಾರಿ ಬರುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳ ಜೋರಾಗಿದ್ದವು.
ನಾಟಕ ಆರಂಭಕ್ಕೂ ಮುನ್ನ ಮಾತನಾಡಿದ ರಂಗಾಯಣದ ನಿರ್ದೇಶಕ ಸಿ.ಅಡ್ಡಂಡ ಕಾರ್ಯಪ್ಪ ಅವರು, ಸಿದ್ದರಾಮಯ್ಯ ಗ್ಯಾಂಗಿನ ತನ್ವೀರ್ ಸೇಠ್ ಸೇರಿ ಹಲವರು ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ನಾವು ಹೇಳುತ್ತಿರುವುದು ಸತ್ಯ ಎಂದು ತಿಳಿದ ಮೇಲೆ ದಾವೆ ಹಿಂಪಡೆದಿದ್ದಾರೆ ಎಂದರು.
ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಜಗದೀಶ ಕಾರಂತ, ವಿಪ ಸದಸ್ಯ ಪಿ.ಎಚ್.ಪೂಜಾರ ಸೇರಿ ಗಣ್ಯರು ನಾಟಕ ವೀಕ್ಷಿಸಿದರು. ನಾಟಕದಲ್ಲಿ ಕೊಡವರು, ಮೇಲುಕೋಟೆಯಲ್ಲಿ ಅಯ್ಯಂಗಾರಿ ಬ್ರಾಹ್ಮಣರು ಹತ್ಯೆ ಸನ್ನಿವೇಶ ಬಂದಾಗ ಜಗದೀಶ ಕಾರಂತ ಸೇರಿ ಪ್ರೇಕ್ಷಕರು ಭಾವುಕರಾಗಿದ್ದರು.
ಕಲಾಭವನ ಸಂಪೂರ್ಣ ಜನರಿಂದ ತುಂಬಿತುಳಿಕಿತು.
ನಾಟಕ ವಿರೋಧಿಸಿ ಪ್ರತಿಭಟನೆ
ಬಸವಾದಿ ಶರಣರ ನಾಡಿನಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡುವ ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ ದುರದೃಷ್ಟಕರ ಎಂದು ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರವಿವಾರ ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.