Chalukya, Ranna Utsav being neglected
ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆ, ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸಿ ಪ್ರವಾಸೋದ್ಯಮ ಸೆಳೆಯುವ ನಿಟ್ಟಿನಲ್ಲಿ ಆಯೋಜನೆಗಳು ಉತ್ಸವಗಳನ್ನು ಸರ್ಕಾರ ಚುನಾವಣಾ ವರ್ಷದಲ್ಲಿ ಭರ್ಜರಿಯಾಗಿ ಸಂಘಟಿಸುತ್ತಿದೆ. ಆದರೆ ಈ ವಿಚಾರದಲ್ಲೂ ಎಂದಿನಂತೆ ಬಾಗಲಕೋಟೆ ಜಿಲ್ಲೆಯನ್ನು ಕಡೆಗಣಿಸಿದೆ.
ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಿಡಿದು ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಸಿ.ಪಾಟೀಲ ಅವರ ವರೆಗೆ ಎಲ್ಲರೂ ಚಾಲುಕ್ಯ ಉತ್ಸವ ಮಾಡೇ ಮಾಡ್ತೀವಿ ನೋಡ್ತಾ ಇರಿ ಅಂತಾ ಜನರ ಮೂಗಿಗೆ ತುಪ್ಪ ಸವರುತ್ತಲೇ ಬಂದಿದ್ದರು. ಇನ್ನೇನು ರಾಜ್ಯ ಸರ್ಕಾರ ಬಜೆಟ್ ಮುಗ್ಸಿ ಚುನಾವಣೆಗೆ ಹೋಗಲು ತುದಿಗಾಲ ಮೇಲೆ ನಿಂತಿದರೂ ಜಿಲ್ಲೆಯಲ್ಲಿ ನಡೆಯಬೇಕಿದ್ದ ಎರಡು ಉತ್ಸವಗಳ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ.
ಜಿಲ್ಲೆಗೆ ನೇಮಕಗೊಂಡ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಇಲ್ಲಿನ ಅಭಿವೃದ್ಧಿ, ಬೆಳವಣಿಗೆಗಳ ಬಗ್ಗೆ ಎಂದಿಗೂ ಗಮನಹರಿಸಿದವರಲ್ಲ.
ಕೇವಲ ರಾಷ್ಟ್ರೀಯ, ರಾಜ್ಯ ಮಟ್ಟದ ಉತ್ಸವಗಳಿಗೆ ಧ್ವಜಾರೋಹಣಕ್ಕಷ್ಟೇ ಆಗಮಿಸುವ ಸಚಿವರು ತಮ್ಮ ತವರು ಜಿಲ್ಲೆ ಗದಗನಲ್ಲಿ ನಡೆಯುವ ಲಕ್ಕುಂಡಿ ಉತ್ಸವದ ತಯಾರಿಗೆ ಉತ್ಸುಕ ತೋರಿದರಾದರೂ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ಚಾಲುಕ್ಯ, ರನ್ನ ಉತ್ಸವಗಳ ಬಗ್ಗೆ ಕನಿಷ್ಠ ಸರ್ಕಾರಕ್ಕಾಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಲಿ ಪತ್ರವನ್ನೂ ಬರೆದಿಲ್ಲ.
ಮುಳುಗಡೆ ನಂತರ ಜಿಲ್ಲೆ ಇದ್ದ ಬೇರುಗಳನ್ನು ಕಳೆದುಕೊಂಡಿದ್ದು, ಸರ್ಕಾರ ಜಿಲ್ಲೆ ಬಗ್ಗೆ ಹೊಂದಿರುವ ತಾತ್ಸಾರದಿಂದಾಗಿ ಸಾಂಸ್ಕೃತಿಕ ಲೋಕ ಬಡವಾಗುತ್ತಲೇ ಹೊರಟಿದೆ.
ಅತ್ತ ಬಾದಾಮಿಗೆ ನಿಂತಿದ್ದರಷ್ಟೇ ಚಾಲುಕ್ಯ ಉತ್ಸವ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಿಗೆ ಸಾರ್ವಜನಿಕ ವಲಯದಲ್ಲಿ ಬೇಸರ ಉಂಟಾಗಿದ್ದು, ಇಡೀ ದಕ್ಷಿಣ ಭಾರತವನ್ನು ಆಳಿದ್ದ ಚಾಲುಕ್ಯರ ಬಗ್ಗೆ ಸರ್ಕಾರ ಮತ್ತು ಧ್ವನಿ ಎತ್ತ ವಿಪಕ್ಷಗಳಿಗೆ ಇಷ್ಟೇಕೆ ತಾತ್ಸಾರ ಎಂಬ ಪ್ರಶ್ನೆ ಉದ್ಭವಿಸಿದೆ.
ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಂಪಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಅದ್ಧೂರಿ ಉತ್ಸವಗಳನ್ನು ಮಾಡಿರುವ ಸರ್ಕಾರಕ್ಕೆ ಚಾಲುಕ್ಯ ಉತ್ಸವ ಮಾಡುವುದಕ್ಕೆ ಹಣಕಾಸಿನ ಕೊರತೆ ಉಂಟಾಯಿತೆ ಎಂಬುದಕ್ಕೆ ಉತ್ತರ ಆಳುವವರಿಂದಲೇ ದೊರೆಯಬೇಕಿದೆ.