Will the Fight for AIIMS be Fruitless Due to Politicians’ Indifference
ಸದ್ಯದ ಬೆಳವಣಿಗೆಗಳು ಹಾಗೂ ಬೆಳಗಾವಿ ಅಧಿವೇಶನದಲ್ಲಿ ನಡೆದಿರುವ ಚರ್ಚೆಗಳನ್ನು ಗಮನಿಸಿದರೆ ರಾಜ್ಯಕ್ಕೆ ಘೋಷಣೆಯಾಗಿರುವ ಹಾಗೂ ಜಿಲ್ಲೆಯ ಹಲವಾರು ಮಂದಿ ಬೆಂಬಲಿಸಿರುವ ಏಮ್ಸ್ ಜಿಲ್ಲೆಯ ರಾಜಕೀಯ ನಾಯಕರುಗಳ ಜಾಣ ಕುರುಡು ಮನಸ್ಥಿತಿಯಿಂದ ಜಿಲ್ಲೆಯ ಕೈತಪ್ಪಿ ನೆರೆಯ ರಾಯಚೂರು ಜಿಲ್ಲೆಯ ಪಾಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಈ ವಿಚಾರದಲ್ಲಿ ಜಿಲ್ಲೆಯ ಪರ ನಿಲ್ಲಬೇಕಿದ್ದ ಮೂವರು ಪ್ರಭಾವಿ ಸಚಿವರು ಹಾಗೂ ವಿಪಕ್ಷ ನಾಯಕರು ಏಮ್ಸ್ ಗೂ ತಮಗೂ ಸಂಬಂಧವೇ ಇಲ್ಲವಂತೆ ವರ್ತಿಸುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಜಿಲ್ಲೆಯ ಯಾವ ರಾಜಕೀಯ ನಾಯಕರೂ ಜಿಲ್ಲೆಯ ಪರ ನಿಲ್ಲಲಿಲ್ಲ. ಇದಕ್ಕೆ ಬದಲಾಗಿ ನೆರೆಯ ರಾಯಚೂರಿನ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಏಮ್ಸ್ ಅನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗುವ ಕನಸು ಬಹುತೇಕ ಕಮರಿದ ಹಾಗೆ ಕಾಣುತ್ತದೆ.
ಅತ್ತ ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಈಗಾಗಲೇ ಇನ್ನೂರು ದಿನ ಪೂರೈಸಿ ಮುನ್ನೂರನೇ ದಿನದತ್ತ ಸಾಗುತ್ತಿದೆ ಹಾಗೂ ಆ ಜಿಲ್ಲೆಯ ಮಠಾಧೀಶರು ಚಳವಳಿಯಲ್ಲಿ ಭಾಗಿಯಾಗಿ ಬಹಿರಂಗ ಬೆಂಬಲ ಸೂಚಿಸಿದ್ದಾರೆ.
ಇನ್ನೂ ಕಾಲ ಮಿಂಚಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಜಿಲ್ಲೆಗೆ ಏಮ್ಸ್ ತರುವುದು ಕಷ್ಟಸಾಧ್ಯವೇನಲ್ಲ. ಆದರೆ ಈ ಕನಸಿಗೆ ಪಕ್ಷಾತೀತ ಹೋರಾಟ ಅಗತ್ಯವಾಗಿದೆ.