Newyear Happy News for Sugarcane farmers As They Get Rs.150 More on FRP
ಇದು ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ. ಹೊಸ ವರ್ಷಕ್ಕೆ ರಾಜ್ಯ ಸರಕಾರ ಕಬ್ಬಿನ ಉಪ ಉತ್ಪನ್ನ ಮೊಲ್ಯಾಸಿಸ್ ಹಾಗೂ ಎಥೆನಾಲ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶದಲ್ಲಿ ಎಫ್ಆರ್ಪಿ ದರ ಹೊರತುಪಡಿಸಿ, ರೈತರಿಗೆ ಪ್ರತೀ ಮೆಟ್ರಿಕ್ ಟನ್ಗೆ 150 ರೂಪಾಯಿ ಹೆಚ್ಚು ಪಾವತಿಸಲು ಆದೇಶ ಹೊರಡಿಸಿದೆ. ಈ ಮೂಲಕ ಕಬ್ಬು ಬೆಳೆಗೆ ಬೆಂಬಲ ಬೆಲೆ, ಉಪ ಉತ್ಪನ್ನಗಳ ಲಾಭಾಂಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಮಣಿದಿದೆ.
ಈ ಪ್ರಕ್ರಿಯೆಗೂ ಮುನ್ನ ರಾಜ್ಯ ಸರಕಾರ ಎಥೆನಾಲ್ನಿಂದ ಬರುವ ಲಾಭಾಂಶದಲ್ಲಿ 50 ರೂಪಾಯಿಗಳನ್ನು ಪಾವತಿಸಲು ಆದೇಶಿಸಿತ್ತು. ಹೀಗೆ ಹೊಸವರ್ಷದಲ್ಲಿ ಎಫ್ಆರ್ಪಿ 2850 ರೂ ಜೊತೆಗೆ 150ರೂ ಅಂದರೆ 3000ರೂ ಗಳ ದರ ಪ್ರತೀ ಮೆಟ್ರಿಕ್ ಟನ್ಗೆ ರೈತರಿಗೆ ದೊರಕಲಿದೆ.
ಈ ಬಗ್ಗೆ ವಿಕಾಸಸೌದಲ್ಲಿ ಡಿ.5ರಂದು ನಡೆದ ಕಬ್ಬು ನಿಯಂತ್ರಣ ಮಂಡಳಿಯ ಸಭೆಯ ತೀರ್ಮಾನದ ಬಳಿಕ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈ ಬಗ್ಗೆ ಘೋಷಣೆ ಮಾಡಿದ್ದರು. ಎಫ್ಆರ್ ಪಿ(FRP) ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 50 ರೂಪಾಯಿಯಂತೆ ಕಬ್ಬು ಬೆಳೆಗಾರರಿಗೆ ನೀಡುತ್ತಿರುವುದಾಗಿ ಸಚಿವರು ತಿಳಿಸಿದ್ದರು. ಈ ಸಭೆಯಲ್ಲಿ ರೈತ ಹೋರಾಟಗಾರರದ ಕುರುಬೂರು ಕುಮಾರ್, ಸಿದ್ದಗೌಡ ಮೋದಗಿ ಮತ್ತಿತರರು ಭಾಗಿಯಾಗಿದ್ದರು. ಆದರೆ ಇದು ಕಣ್ಣೆರೆಸುವ ತಂತ್ರ ಎಂದು ಪ್ರತಿಭಟನಾನಿರತ ರೈತ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಹದ ವಿವಿಧೆಡೆ ರೈತರ ಪ್ರತಿಭಟನೆ
ಉಪ ಉತ್ಪನ್ನಗಳ ಲಾಭಾಂಶ ಬೇಕು ಎಂದು ಮೈಸೂರು, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸಿದ್ದರು. ಮಾತ್ರವಲ್ಲದೆ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವೆಡೆ ಎಫ್ಆರ್ಪಿಗಾಗಿ ಹತ್ತು ಹಲವು ಪ್ರತಿಭಟನೆಗಳು ನಡೆದಿದ್ದವು.
ಚುನಾವಣಾ ಕೇಂದ್ರಿತ ಕೊಡುಗೆಗಳು
ರಾಜ್ಯದಲ್ಲಿ ಈ ವರ್ಷ ತೆರಿಗೆ ಸಂಗ್ರಹ ಅಂದುಕೊಂಡಿದ್ದಲೂ ಜಾಸ್ತಿ ಆಗಿದೆ. ಹಾಗಾಗಿ ಮನಸೋ ಇಚ್ಛೆ ಭರವಸೆಗಳನ್ನು, ಕೊಡುಗೆಗಳನ್ನು ನೀಡಲು ಅಡ್ಡಿಯಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೆಲ್ಲಾ ಮಾಮೂಲು ಎಂದು ರಾಜಕೀಯ ಪಂಡಿತರ ವಿಶ್ಲೇಷಣೆ.