District Folklore convention to be Held on February 05
ಬಾಗಲಕೋಟೆ: ಕನ್ನಡ ಜಾನಪದ ಪರಿಷತ್ತಿನಿಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಫೆ.5ರಂದು ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಜರುಗಲಿದೆ.
ಹಿರಿಯ ಜಾನಪದ ಕಲಾವಿದ ಡಾ.ವೆಂಕಪ್ಪ ಅಂಬಾಜಿ ಸುಗುತೇಕರ ಸರ್ವಾಧ್ಯಕ್ಷತೆಯಲ್ಲಿ ಶಿರೂರಿನ ಶ್ರೀ ಸಿದ್ದೇಶ್ವರ ಪ್ರೌಢ ಶಾಲಾ ಮೈದಾನದಲ್ಲಿ ಜರುಗಲಿರುವ ಸಮ್ಮೇಳನವನ್ನು ಅಂದು ಬೆಳಗ್ಗೆ 10.30ಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿರೂರ ಶಿವಯೋಗಾಶ್ರಮದ ಶ್ರೀಮರಿಮಹಾಂತ ಚನ್ನವೀರ ದೇವರು ಸಾನಿಧ್ಯ ವಹಿಸಲಿದ್ದು, ಸಂಸದ ಪಿ.ಸಿ.ಗದ್ದಿಗೌಡರ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ, ಮೆಲ್ಬ್ರೋ ಸಕ್ಕರೆ ಕಾರ್ಕಾಣೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಮೆಳ್ಳಿಗೇರಿ, ಬಟಿಡಿಎ ಮಾಜಿ ಸಭಾಪತಿ ಸಿ.ವಿ.ಕೋಟಿ, ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ತಮ್ಮಣ್ಣ ಗಿರಿಜಾ ಅತಿಥಿಗಳಾಗಿ ಆಗಮಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಅವರು ಧ್ವಜಾರೋಹಣ ನೆರವೇರಲಿಸಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಹಿರಿಯ ಕಲಾವಿದ ಲಕ್ಷ್ಮಪ್ಪ ಬಾರಡ್ಡಿ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 1ಕ್ಕೆ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಮಾಜಿ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರು ಆಶಯ ನುಡಿಗಳನ್ನಾಡಲಿದ್ದು, ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳ ಕುರಿತು ಡಾ.ಸಣ್ಣವೀರಣ್ಣ ದೊಡ್ಡಮನಿ, ಜಿಲ್ಲೆಯ ಜಾನಪದ ಪರಂಪರೆ ಕುರಿತು ಡಾ.ಪ್ರಕಾಶ ಖಾಡೆ, ಬೂದಿಹಾಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲೆ ಸವಿತಾ ಕೋಳಿ ಅವರು ಜಾನಪದ ಮತ್ತು ಮಹಿಳೆ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 1.30ಕ್ಕೆ ಸರ್ವಾಧ್ಯ್ಷರ ಬದುಕು ಹಾಗೂ ಸಾಧನೆ ಕುರಿತಾದ ಗೋಷ್ಠಿಯಲ್ಲಿ ಆಶುಕವಿ ಡಾ. ಸಿದ್ದಪ್ಪ ಬಿದರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕಸಾಪ ರಾಜ್ಯ ಕಾರ್ಯಕಾರಿ ಸದಸ್ಯ ಜಿ.ಕೆ.ತಳವಾರ ಅವರು ಸರ್ವಾಧ್ಯಕ್ಷ ಕುರಿತಾಗಿ ಮಾತನಾಡಲಿದ್ದಾರೆ. ಸಾಹಿತಿ ಡಾ.ನಾಗರಾಜ ನಾಡಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ವಿವಿಧ ಜಾನಪದ ಕಲಾ ಪ್ರದರ್ಶನಗಳು ಜರುಗಲಿದ್ದು, ಸಂಜೆ 5ಕ್ಕೆ ನಡೆಯುವ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ.ಎಸ್.ಎಸ್.ಭೂಮಣ್ಣವರ ನಿರ್ಣಯ ಮಂಡಿಸಲಿದ್ದಾರೆ ಎಂದು ವಿವರಿಸಿದರು.
ನಂತರ ನಡೆಯಲಿರುವ ಸನ್ಮಾನ ಹಾಗೂ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಚ್.ವೈ.ಮೇಟಿ ಸಾಧಕರನ್ನು ಸನ್ಮಾನಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಸ್.ಆರ್.ಮನಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಂಜೆ 7 ಗಂಟೆಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಗುರಮ್ಮ ಸಂಕೀನಮಠ ಅಧ್ಯಕ್ಷತೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ತೊವಿವಿ ವಿಜ್ಞಾನಿ ಡಾ.ವಸಂತ ಗಾಣಿಗೇರ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ 2 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಬಿಟಿಡಿಎ ಮಾಜಿ ಸಭಾಪತಿ ಸಿ.ವಿ.ಕೋಟಿ ಅವರು ಮಾತನಾಡಿ, ಶಿರೂರಿನಲ್ಲಿ ಜಾನಪದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಥಮ ಸಮ್ಮೇಳನ ಅಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ.ಕಟಗಿ, ಜಿಲ್ಲಾ ಸಂಚಾಲಕ ನಿಂಗರಾಜ ಮಬ್ರುಮಕರ, ಖಜಾಂಜಿ ಸುರೇಶ ವಸ್ತ್ರದ, ಜಂಟಿ ಕಾರ್ಯದರ್ಶಿ ವಿಶ್ವೇಶ್ವರಯ್ಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.