District Conference of Kannada Folk Parishad on February 5 in Shirur
ಬಾಗಲಕೋಟೆ: ಕನ್ನಡ ಜಾನಪದ ಪರಿಷತ್ ಬಾಗಲಕೋಟೆ ಜಿಲ್ಲಾ ಪ್ರಥಮ ಸಮ್ಮೇಳನ ಸಮೀಪದ ಶಿರೂರ ಪಟ್ಟಣದಲ್ಲಿ ಫೆ.5 ರಂದು ನಡೆಯಲಿದೆ.
ಅಲ್ಲಿನ ಸಿದ್ದೇಶ್ವರ ಪ್ರೌಢ ಶಾಲಾ ಮೈದಾನದ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ನಡೆಸುವ ಕುರಿತು ಸುದೀರ್ಘ ಚರ್ಚೆ ನಡೆದು ಫೆ.5 ರಂದು ಜಿಲ್ಲಾ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.
ಸಮ್ಮೇಳನದ ರೂಪು ರೇಷೆಗಳನ್ನು ಸಭೆಗೆ ತಿಳಿಸಿದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ. ಎಂ. ಸಾವಕಾರ, ಶಿರೂರ ಗ್ರಾಮದ ಹಿರಿಯರು, ಯುವಕರು ಒಟ್ಟಾಗಿ ಶ್ರಮಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಸಿ. ವಿ. ಕೋಟಿ ಮಾತನಾಡಿ, ಗ್ರಾಮಸ್ಥರ ಸಹಾಯ, ಸಹಕಾರದಿಂದ ಯಶಸ್ವಿ ಸಮ್ಮೇಳನ ನಡೆಸಿಕೊಡುವ ಭರವಸೆ ನೀಡಿದರಲ್ಲದೇ, ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆದು ಜಾನಪದ ಸಂಸ್ಕೃತಿಯನ್ನು ಬಿಂಬಿಸುವಂತಾಗಬೇಕು. ಅದಕ್ಕಾಗಿ ಮಾಡಬೇಕಾದ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಶಿಕ್ಷಕ ಎಂ.ಎಚ್.ಗಾಣಿಗೇರ ಸಮಿತಿಗಳ ವಿವರ ಸಭೆಗೆ ತಿಳಿಸಿ, ಎಲ್ಲ ಸಮಿತಿಗಳು ಸಹ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಕೋರಿದರು.
ಸಭೆಯಲ್ಲಿ ಹಿರಿಯರಾದ ಸಿ.ಎನ್.ಕಟಗಿ, ಸುರೇಶ ದೇಸಾಯಿ, ಸಿದ್ದಪ್ಪ ಕೋಟಿಕಲ್, ಎಸ್. ಎಸ್. ಕಲಗುಡಿ, ಸಿ. ಎಂ. ಪ್ಯಾಟಿಶೆಟ್ಟರ, ಜಿ. ಕೆ. ತಳವಾರ, ಕಜಾಪ ತಾಲೂಕಾಧ್ಯಕ್ಷ ಎಸ್. ಬಿ. ಕಟಗಿ, ಶ್ರೀಪಾದ ಕೋರಿ, ಕಲ್ಲಪ್ಪ ಭಗವತಿ, ಎಂ. ಎಸ್. ಕಲಗುಡಿ, ಸಂಜಯ ನಡುವಿನಮನಿ, ಮುತ್ತಪ್ಪ ಅರಕೇರಿ, ಕಜಾಪ ಹುನಗುಂದ ತಾಲೂಕಾಧ್ಯಕ್ಷ ಬಿ. ಡಿ. ಚಿತ್ತರಗಿ ಸೇರಿದಂತೆ ಮತ್ತಿತರರು ಇದ್ದರು.
![](https://nammabagalkot.com/wp-content/uploads/2023/01/WhatsApp-Image-2023-01-21-at-5.51.47-PM-940x407.jpeg)